ಹೊಸಮುಖ ಬಯಸಿದ ಕಿತ್ತೂರು ಕ್ಷೇತ್ರ!
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಪ್ರಜ್ಞಾವಂತ ಮತದಾರರ ಕ್ಷೇತ್ರವೆಂದು ಗುರುತಿಸಿಕೊಂಡಿರುವ ಐತಿಹಾಸಿಕ ಕಿತ್ತೂರು ವಿಧಾನಸಭೆ ಕ್ಷೇತ್ರ ಸದಾ ವಿಭಿನ್ನವಾಗಿ ಯೋಚಿಸುವ ಕ್ರಾಂತಿಕಾರಿ ಕ್ಷೇತ್ರವಾಗಿದ್ದು, ಈಗ ಹೊಸಮುಖವನ್ನು ಬಯಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಹಬೀಬ ಶಿಲೇದಾರ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಕ್ಷೇತ್ರ ಹೊಸಮುಖ ಬಯಸಿದ್ದರಿಂದಲೇ ನಾನೂ ಕೂಡಾ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.
ಅತಿವೃಷ್ಟಿ ಮತ್ತು ಕೋವಿಡ್ ಸಂದರ್ಭದಲ್ಲಿ ಬಡವರಿಗೆ, ನೊಂದವರಿಗೆ, ಸಂಕಷ್ಟಗೊಳಗಾದವರಿಗೆ ಕೈಲಾದ ಸಹಾಯ ಮಾಡಿದ್ದೇನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಭೇದÀ,ಭಾವ ಮಾಡದೆ ಎಲ್ಲ ಸಮಾಜದವರ ನೋವಿಗೆ ಸ್ಪಂದಿಸಿದ್ದೇನೆ. ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಎಲ್ಲ ಸಮಾಜದ ಬಾಂಧವರಿಗೆ ಕಷ್ಟ ಕಾಲದಲ್ಲಿ ಮಾಡಿದ ಸಹಾಯವನ್ನು ಬಡವರು ಮರೆತಿಲ್ಲ ಎಂದು ನುಡಿದರು.
ಮೂವರೂ ಪ್ರಬಲ ಆಕಾಂಕ್ಷಿ
ಕಿತ್ತೂರು ವಿಧಾನಸಭೆ ಕ್ಷೇತ್ರಕ್ಕೆ ಸ್ಪರ್ಧಿಸಲು ನಾನು, ಹಿರಿಯ ಮುಖಂಡ ಡಿ. ಬಿ. ಇನಾಮದಾರ ಮತ್ತು ಬಾಬಾಸಾಹೇಬ ಪಾಟೀಲ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದೇವೆ. ಮೂವರನ್ನು ಕೂಡ್ರಿಸಿ, ಪಕ್ಷ ನಡೆಸಿದ ಸಮೀಕ್ಷೆ ಆಧಾರದ ಮೇಲೆ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲಿದೆ ಎಂದು ಶಿಲೇದಾರ ಮಾಹಿತಿ ನೀಡಿದರು.
ಕಿತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಎಲ್ಲ ವಾತಾವರಣವಿದೆ. ಅದನ್ನು ಕಳೆದುಕೊಳ್ಳುವುದು ಬೇಡವೆಂದು ಪಕ್ಷದ ಹಿರಿಯ ನಾಯಕರು ತೀರ್ಮಾನಿಸಿದ್ದಾರೆ. ಹೀಗಾಗಿ ಯಾವುದೇ ದುಡುಕಿನ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುವ ಸಂಭವ ಇಲ್ಲ ಎಂದರು.
ಕಿತ್ತೂರು ಕ್ಷೇತ್ರಕ್ಕೆ ಮೊದಲೇ ಟಿಕೆಟ್ ಘೋಷಣೆಯನ್ನು ಹೈಕಮಾಂಡ್ ಮಾಡುತ್ತಾರೆಂಬ ವಿಶ್ವಾಸವಿತ್ತು. ಆದರೆ ಡಿ. ಬಿ.ಇನಾಮದಾರ ಅವರ ಆರೋಗ್ಯದಲ್ಲಿ ಏರುಪೇರಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗುತ್ತಾರೆ. ಬಂದ ನಂತರ ಅವರೇ ಸ್ಪರ್ಧಿಸುತ್ತಾರೊ ಅಥವಾ ಅವರ ಕುಟುಂಬದ ಸದಸ್ಯರು ಸ್ಪರ್ಧಿಸುತ್ತಾರೊ ಅಥವಾ ಬೇರೆಯವರನ್ನು ಅವರು ಬೆಂಬಲಿಸುತ್ತಾರೊ ಕಾದು ನೋಡಬೇಕಿದೆ. ಅವರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನೂ ಬದ್ಧನಾಗಿರುತ್ತೇನೆ ಎಂದು ಈಗಾಗಲೇ ಘೋಷಣೆ ಮಾಡಿದ್ದೇನೆ. ಅದರಂತೆ ಮುಂದೆಯೂ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
Post a Comment