ಪ್ರೆಸ್ಕ್ಲಬ್ ವಾರ್ತೆ
ಹುಬ್ಬಳ್ಳಿ: ದೇವರಿಗೆ ದಾನ ಸಮರ್ಪಣೆ ಮಾಡುವುದರಿಂದ ಮಾನವನಿಗೆ ಸಂತೃಪ್ತಿ ದೊರೆಯುತ್ತದೆ. ಪಿತೃಗಳು ತೃಪ್ತರಾಗುತ್ತಾರೆ. ಅನ್ನ, ವಸ್ತ್ರ ಕೊರತೆ ಆಗುವುದಿಲ್ಲ. ಸಂತಾನ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ನ್ಯಾಯಾಧೀಶ ಪಿ. ಎಸ್. ದಿನೇಶಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿಯ ಸಿದ್ಧಾರೂಢಸ್ವಾಮಿ ಶ್ರೀಮಠದ ಕೈಲಾಸ ಮಂಟಪದಲ್ಲಿ ಹನಮಂತ ಕೊಟಬಾಗಿ ಮತ್ತು ಪರಿವಾರ ಇತ್ತೀಚೆಗೆ ನೀಡಿದ ಬೆಳ್ಳಿ ತೊಟ್ಟಿಲು ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹನಮಂತ ಕೊಟಬಾಗಿ ಅವರು ಶ್ರೀಮಠಕ್ಕೆ ಬೆಳ್ಳಿ ತೊಟ್ಟಿಲು ಕಾಣಿಕೆ ಸಮರ್ಪಿಸುವ ಮೂಲಕ ಅತ್ಯುತ್ತಮವಾದ ಕಾರ್ಯ ಮಾಡಿದ್ದಾರೆ. ಇದರಿಂದ ಸಿದ್ಧಾರೂಢ ಸ್ವಾಮೀಜಿ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಶ್ಲಾಘಿಸಿದರು.
ಪಂಡಿತ ವಾದಿರಾಜ್ ಆಚಾರ್ಯರು ತೊಟ್ಟಿಲು ಸಮರ್ಪಣೆಯ ಮಹತ್ವ ಕುರಿತು ಮಾತನಾಡಿದರು.
ಹೈಕೋರ್ಟ್ ನ್ಯಾಯಾಧೀಶ ಉಮೇಶ ಅಡಿಗ ಅವರೂ ಮಾತನಾಡಿದರು. ಶ್ರೀಮಠದ ಆಡಳಿತಾಧಿಕಾರಿ, ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶೆ ಕೆ. ಜಿ. ಶಾಂತಿ ಅಧ್ಯಕ್ಷತೆ ವಹಿಸಿದ್ದರು.
ಧರ್ಮದರ್ಶಿ ಹನಮಂತ ಕೊಟಬಾಗಿ, ಗೀತಾ ಕೊಟಬಾಗಿ, ಡಾ. ಸುಧನ್ವ ಕೊಟಬಾಗಿ ಅವರನ್ನು ಶ್ರೀಮಠದ ಪರವಾಗಿ ಸತ್ಕರಿಸಲಾಯಿತು.
ಧರ್ಮದರ್ಶಿ ಕೆ. ಎಲ್. ಪಾಟೀಲ ಸ್ವಾಗತಿಸಿದರು. ಹನಮಂತ ಕೊಟಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಎಸ್. ಐ. ಕೊಳಕೂರ ನಿರೂಪಿಸಿದರು. ಶಾಮಾನಂದ ಪೂಜೇರಿ ವಂದಿಸಿದರು.
ಟ್ರಸ್ಟ್ ಕಮೀಟಿ ಚೇರಮನ್ ಧರಣೇಂದ್ರ ಜವಳಿ, ವೈಸ್ ಚೇರಮನ್ ಗೋವಿಂದ ಮಣ್ಣೂರ, ಧರ್ಮದರ್ಶಿಗಳಾದ ಡಿ. ಡಿ. ಮಾಳಗಿ, ಮಹೇಶಪ್ಪ ಹನಗೋಡಿ, ಕೆ. ಕೆ. ತೊರಗುಂಟಿ, ಜಗದೀಶ ಮಗಜಿಕೊಂಡಿ, ಜಿ. ಎಸ್. ನಾಯಕ, ಮಠದ ಮ್ಯಾನೇಜರ್ ಈರಣ್ಣ ತುಪ್ಪದ ಉಪಸ್ಥಿತರಿದ್ದರು.
ತಂದರು ಊರಿಗೆ ಗೌರವ
ಹುಬ್ಬಳ್ಳಿಯ ಸದ್ಗುರು ಸಿದ್ದಾರೂಢ ಮಠಕ್ಕೆ 14 ಕೆಜಿ 600 ಗ್ರಾಮದ ಬೆಳ್ಳಿಯ ತೊಟ್ಟಿಲು, ಕಿತ್ತೂರಿನ ರುಕ್ಮಿಣಿ ಪಾಂಡುರಂಗ ದೇವರಿಗೆ ನಾಲ್ಕು ಕಿಲೋ 300 ಗ್ರಾಮದ ಬೆಳ್ಳಿ ಕವಚ ಸಮರ್ಪಣೆ, ಉತ್ತರಾದಿಮಠದ ಸತ್ಯಾತ್ಮತೀರ್ಥ ಪೂಜ್ಯರಿಗೆ ಅವರ 21ನೇ ವರ್ಷದ ಸನ್ಯಾಶ್ ಉತ್ಸವದ ಸಮಾರಂಭಕ್ಕೆ 21 ಕೆಜಿ ಬೆಳ್ಳಿ ಕಾಣಿಕೆ ನೀಡಿರುವ ಸಿದ್ದಾರೂಢ ಮಠದ ದರ್ಮದರ್ಶಿಯೂ ಆಗಿರುವ ಹನಮಂತ ಕೊಟಬಾಗಿ ಅವರು ಕಿತ್ತೂರಿಗೆ ಗೌರವ ತಂದಿದ್ದಾರೆ. ದಾನಧರ್ಮದ ಪರಮ ಪರಂಪರೆ ಎತ್ತಿ ಹಿಡಿದಿದ್ದಾರೆ ಎಂದು ಸಾರ್ವಜನಿಕರು ಬಣ್ಣಿಸಿದ್ದಾರೆ.