2023ಕ್ಕೆ ಮತ್ತೆ ಶಾಸಕ: ಇನಾಮದಾರ ವಿಶ್ವಾಸ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ‘ವಿಧಾನಸಭೆ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದ ಮತದಾರರು 5 ಬಾರಿ ನನ್ನನ್ನು ಗೆಲ್ಲಿಸಿದ್ದಾರೆ, ನಾಲ್ಕು ಬಾರಿ ಸೋಲಿಸಿದ್ದಾರೆ. ಜನ ಬಯಸಿದರೆ 2023ಕ್ಕೆ ಮತ್ತೆ ಬರ್ತೇನಿ' ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಡಿ. ಬಿ. ಇನಾಮದಾರ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ನನಗೆ ಆರೋಗ್ಯ ಚನ್ನಾಗಿದೆ, ಗಟ್ಟಿಯಾಗಿಯೂ ಇದ್ದೇನೆ' ಎಂದು ಅಪಪ್ರಚಾರ ಮಾಡುವವರಿಗೆ ಸ್ಪಷ್ಟ ಸಂದೇಶ ರವಾನಿಸಿದರು.
‘ಯಾರ್ಯಾರೊ ನನಗೆ ಪಕ್ಷದ ಟಿಕೆಟ್ ಸಿಕ್ಕಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ನಾನೂ ಹಾಗೆ ಹೇಳಿಕೊಳ್ಳಬಹುದಿತ್ತು. ಹಾಗೆ ಹೇಳಿಕೊಳ್ಳುವುದಿಲ್ಲ. 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಕೊಟ್ಟೇ ಕೊಡುತ್ತೇನೆ, ನಾನೇನೂ ಹಿಂದೆ ಸರಿಯುವ ಪೈಕಿ ಅಲ್ಲ' ಎಂದು ಯಾರ ಹೆಸರೂ ಉಲ್ಲೇಖಿಸದೆ ವಿರೋಧಿಗಳಿಗೆ ತಿರುಗೇಟು ನೀಡಿದರು.
‘ನನ್ನ ಮೇಲಿನ ಜನರ ಉತ್ಸಾಹ ಮತ್ತು ಅಭಿಮಾನ ನೋಡಿದರೆ ಕ್ಷೇತ್ರದಲ್ಲಿ ಏನೋ ಕೊರತೆ ಇದ್ದಂತೆ ಕಾಣುತ್ತದೆ. ಅವರ ಅಭಿಪ್ರಾಯ ಕೇಳುತ್ತೇನೆ. ನಿಮ್ಮ ಅವಶ್ಯಕತೆ ಇದೆ ಎಂದು ಹೇಳಿದರೆ ಹಿಂದೆ ಸರಿಯುವುದಿಲ್ಲ' ಎಂದು ನುಡಿದ ಅವರು, ‘ಶಾಸಕನಾಗುವುದು ಕ್ಷೇತ್ರದ ಜನರ ಕುಂದು, ಕೊರತೆ ನೀಗಿಸಲು' ಎಂದೂ ಅಭಿಪ್ರಾಯಪಟ್ಟರು.
ಮುಖಂಡರಾದ ಶಂಕರ ಹೊಳಿ, ನಿಂಗಪ್ಪ ತಡಕೋಡ, ಸಂಜೀವ ಲೋಕಾಪುರ, ವಿಜಯಕುಮಾರ ಶಿಂಧೆ, ಪುಂಡಲೀಕ ನೀರಲಕಟ್ಟಿ, ದೇವೇಂದ್ರ ಪಾಟೀಲ, ಈರಣ್ಣ , ಸಿದ್ರಾಮ ಅಪ್ಪೋಜಿ, ಆಂಜನೇಯ ಪೂಜೇರ, ಗುಲಾಬ ಬಾಳೇಕುಂದರಗಿ, ಚಂದ್ರು ಮಾಳಗಿ ನೂರಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
Post a Comment