ಪದವಿ, ಹುದ್ದೆ ಮೀರಿ ಬೆಳೆದವರು ಧರ್ಮಾಧಿಕಾರಿ - Kittur



ಪದವಿ, ಹುದ್ದೆ ಮೀರಿ ಬೆಳೆದವರು ಧರ್ಮಾಧಿಕಾರಿ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಪವಿತ್ರ ಧರ್ಮಸ್ಥಳ ಶ್ರೀಕ್ಷೇತ್ರದ ಪೂಜ್ಯ ವೀರೇಂದ್ರ ಹೆಗ್ಗಡೆ ಎಂಬ ಮಾಂತ್ರಿಕ ಹೆಸರು ಕೇಳಿದರೆ ಸಾಕು ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ, ಆರೋಗ್ಯ.. ಸೇರಿ ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ವಿರಾಟ್ ಸ್ವರೂಪದ ಸೇವಾ ಜಗತ್ತು ಕ್ಷಣ ಕಾಲ ಕಣ್ಮುಂದೆ ಪ್ರತಿಷ್ಠಾಪನೆಗೊಳ್ಳುತ್ತದೆ. ಅವರ ಸೇವಾಕ್ಷೇತ್ರದ ಹರವು ತುಂಬಾ ವಿಸ್ತಾರವಾದದ್ದು. ಶ್ರೀ ಮಂಜುನಾಥ ದೇವರÀ ಅವತಾರವೆಂದೇ ಕೋಟ್ಯಾನುಕೋಟಿ ಭಕ್ತರು ಪೂಜ್ಯರನ್ನು ಭಾವಿಸಿದ್ದಾರೆ ಮತ್ತು ಗೌರವಿಸುತ್ತಾರೆ. ಧರ್ಮಸ್ಥಳ ಎಂದರೆ ನೆನಪಾಗುವುದೇ ಧರ್ಮಾಧಿಕಾರಿ ಮತ್ತು ಪೂಜ್ಯರು ಆದ ವೀರೇಂದ್ರ ಹೆಗ್ಗಡೆ ಅವರು.  ಭಕ್ತರ ಹೃದಯ ಮಂದಿರದಲ್ಲಿ ಅಷ್ಟು ಶಾಶ್ವತವಾಗಿ ಅವರು ನೆಲೆಸಿ ಹೋಗಿದ್ದಾರೆ. ಇದೇನೂ ಅತಿಶಯೋಕ್ತಿಯ ಮಾತಲ್ಲ, ಸತ್ಯವಾದ ಮಾತು ಎನ್ನುತ್ತವೆ  ಸಾತ್ವಿಕ ಮನಸ್ಸುಗಳು.

ಪೂಜ್ಯರಾಗಿ ಕೇವಲ ಭಕ್ತರ ಹೃದಯದಲ್ಲಿ ಅವರು ಕುಳಿತಿಲ್ಲ. ನಾನಾ ಕಾರಣಗಳಿಂದಾಗಿ ಒಡೆದು ಹೋಗುತ್ತಿರುವ ಗ್ರಾಮೀಣ ಭಾಗದ ಜನರ ಮನಸ್ಸುಗಳನ್ನು ಬೆಸೆದು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅವರ ಸಂಸ್ಥೆಯ ಅಧಿಕ ಸಂಖ್ಯೆಯ ಕಾರ್ಯಕರ್ತರು ದುಡಿಯುತ್ತಿದ್ದಾರೆ. ಅದರಲ್ಲೂ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮಾಂತರ ಪ್ರದೇಶದ ಮಹಿಳಾ ಸಬಲೀಕರಣಕ್ಕೆ, ಕೆರೆಗಳ ಪುನರುಜ್ಜೀವನಕ್ಕೆ, ರೈತರ ನಾಳಿನ ನೆಮ್ಮದಿಯ ಬದುಕಿಗೆ ಅವರು ಕೊಟ್ಟಿರುವ ಘನ ಕಾಣಿಕೆ ಶಬ್ದಗಳಿಗೆ ನಿಲುಕದ್ದು. ಪರ್ಯಾಯ ಸರ್ಕಾರವಾಗಿ ಈ ಕ್ಷೇತ್ರಗಳಲ್ಲಿ ಅವರು ಸೇವಾಕಾರ್ಯ ಮುಂದುವರೆಸಿದ್ದಾರೆ. ಪ್ರಶಸ್ತಿ, ಪದವಿ, ಅಧಿಕಾರದ ಗಡಿಗಳನ್ನು ಮೀರಿದ ಸಾಧನೆ ಅವರದು. ಸಾಧನಾ ಕ್ಷೇತ್ರದ ಗೌರಿಶಂಕರ ಅವರು.

ನಮ್ಮ ಭಾರತ ಸರ್ಕಾರ ಇತ್ತೀಚೆಗೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣ ಮಾಡಿದೆ. ಇದರಿಂದ ಆ ಪದವಿಗೆ ಗೌರವ ದೊರೆಯಿತು ವಿನಃ, ಪದವಿಯಿಂದ ಇವರಿಗೆ ಗೌರವ ದೊರೆತಿಲ್ಲ ಎಂಬುದು ಭಕ್ತರೊಬ್ಬರು ಉದ್ಗರಿಸಿದ ಮಾತು. ಇದೂ ಸತ್ಯಕೂಡಾ. 

ಈ ಪದವಿಯ ನೂರಾರು ಪಟ್ಟು ಎತ್ತರಕ್ಕೆ ಬೆಳೆದಿರುವ ಪೂಜ್ಯರ ವ್ಯಕ್ತಿತ್ವಕ್ಕೆ ಈ ಪದವಿ ಸೂಕ್ತವಾದುದಾಗಿದ್ದರೂ, ಇದಕ್ಕೂ ಹೆಚ್ಚಿನ ಪದವಿ ಗೌರವ ನೀಡಿದ್ದರೆ ಭಾರತ ಸರ್ಕಾರ ಜನರ ಇನ್ನೂ ಹೆಚ್ಚಿನ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗುತ್ತಿತ್ತು. 

ಹಿಂದೊಮ್ಮೆ ಕೆಲವು ಮಾಧ್ಯಮಗಳು ಪೂಜ್ಯರನ್ನು ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಸರ್ಕಾರ ಮಾಡಲಿದೆ ಎಂದು ವರದಿ ಮಾಡಿದ್ದವು. ಅದಾಗಿದ್ದರೆ ಅದು ಸೂಕ್ತವಾಗುತ್ತಿತ್ತು. ಕೊನೆಯ ಪಕ್ಷ ಅವರಿಗೆ ಉಪರಾಷ್ಟ್ರಪತಿ ಹುದ್ದೆನ್ನಾದರೂ ನೀಡಿಬೇಕಿತ್ತು ಎಂಬುದು ಸಾವಿರಾರು ಭಕ್ತರ ಅಂತರ್ ಧ್ವನಿಯಾಗಿದೆ.

ಆದರೆ ಇದನ್ನೇ ಇಂದಿನ ಕೆಲ ಮಾಧ್ಯಮಗಳು ಅವರಿಗೆ ಸರ್ಕಾರ ಗೌರವ ಸಲ್ಲಿಸಿತು, 'ಮಿಷನ್ ದಕ್ಷಿಣ ಭಾರತ' ಎಂದೆಲ್ಲ ಬರೆದು ಕೊಂಡಿವೆ, ಬಿತ್ತರಿಸಿವೆ. ಭಕ್ತರ ದೃಷ್ಟಿಯಲ್ಲಿ ಇದೊಂದು ಅವರಿಗೆ ದೊರೆತ ಅತಿ ಚಿಕ್ಕ ಗೌರವ ಎಂಬುದು ಭಕ್ತರ ಅಭಿಮತ. ಸರ್ಕಾರ ವಿವೇಚನೆಯಿಂದ ಅವರ ಘನ ವ್ಯಕ್ತಿತ್ವಕ್ಕೆ ಒಪ್ಪುವ ದೊಡ್ಡ ಹುದ್ದೆಯನ್ನು ನೀಡಬೇಕಿತ್ತು. ಸರ್ಕಾರದ ಬಗೆಗಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು ಎಂಬುದು ಭಕ್ತ ಬಳಗದ ಪ್ರಾಮಾಣಿಕ ಅನಿಸಿಕೆಯಾಗಿದ್ದಂತೂ ಸುಳ್ಳಲ್ಲ.

ಸೇವಾಕ್ಷೇತ್ರದ ನಿತ್ಯಯೋಗಿ...

ಕೇಂದ್ರ ಸರ್ಕಾರದ ವಿರುದ್ಧ ಮಾಡುವ ಟೀಕೆ ಅಥವಾ ಪಕ್ಷವೊಂದರ  ನಿಲುವು ಖಂಡಿಸುವ ಲೇಖನ ನಿಜವಾಗಿಯೂ ಇದಲ್ಲ. ಅನಂತ ತಾನ್ ಅನಂತವಾಗಿ ಸೇವಾ ಕ್ಷೇತ್ರದ ನಿತ್ಯಯೋಗಿ ಆಗಿ ಇರುವವರು 'ಏಷ್ಯಾದ ಶ್ರೇಷ್ಠ ನಾಯಕ, ಲಂಡನ್ ದೇಶದ ಪ್ರತಿಷ್ಠಿತ ಸಂಸ್ಥೆಯೊಂದರ ಜಾಗತಿಕ ಹಸಿರು ಆಸ್ಕರ್' ಪ್ರಶಸ್ತಿ ಪುರಸ್ಕøತರು ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು. ಅಂಥಹ ಮಹಾನ್ ವ್ಯಕ್ತಿತ್ವ ಹೊಂದಿರುವ ಅವರಿಗೆ ಸರ್ಕಾರ ಇನ್ನೂ ಹೆಚ್ಚಿನ ಗೌರವ ನೀಡಿದ್ದರೆ ಲಕ್ಷಾಂತರ ಭಕ್ತರ ಹೃದಯದ ಹರ್ಷ ನೂರ್ಮಡಿಯಾಗುತ್ತಿತ್ತು ಎಂಬುದು ಶ್ರೀಸಾಮಾನ್ಯನ ಅನಿಸಿಕೆಯಾಗಿದೆ. ಅವರೆಲ್ಲರ ಅಂತರ್ ಧ್ವನಿಯ ಪ್ರಾಮಾಣಿಕ ಮಾರ್ದನಿ ಅಷ್ಟೇ ಈ ಬರಹ. ಹೀಗೆ ಬರೆದಿದ್ದಾರೆಂದರೆ ಅವರು ಕಾಂಗ್ರೆಸ್‍ನವರೊ, ಜೆಡಿಎಸ್‍ನವರೊ, ಮತ್ತ್ಯಾವುದೊ ಪಕ್ಷದವರೊ ಅಥವಾ ವಿರೋಧಿಗಳೊ ಎಂದು ಖಂಡಿತವಾಗಿಯೂ ಓದುಗರ ಭಾವಿಸಬೇಕಾಗಿಲ್ಲ..