ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ದ್ವಿಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಪಡೆದು ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ ಜಯಭೇರಿ ಬಾರಿಸಿದ್ದಾರೆ.
ಚನ್ನರಾಜ ಹಟ್ಟಿಹೊಳಿ ಅವರು 3715 ಪ್ರಥಮ ಪ್ರಾಶಸ್ತ್ಯದ ಮತ ಪಡೆದು ಆಯ್ಕೆಯಾಗಿದ್ದಾರೆ. ಲಖನ್ ಜಾರಕಿಹೊಳಿ 2526 ಮತಪಡೆದು ಮಹಾಂತೇಶ ಕವಟಗಿಮಠ ಅವರಿಗಿಂತ ಮುಂದಿದ್ದಾರೆ. ದ್ವಿತೀಯ ಪ್ರಾಶಸ್ತ್ಯದ ಮತಗಳ ಏಣಿಕೆ ನಡೆದು ಅಧಿಕೃತವಾಗಿ ಫಲಿತಾಂಶ ಇನ್ನೂ ಘೋಷಣೆಯಾಗಬೇಕಿದೆ.
ಸಂಘಟನಾತ್ಮಕ ಹೋರಾಟಕ್ಕೆ ಜಯ
ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವ, ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಂಘಟನೆ ಹೋರಾಟ, ಪಕ್ಷನಿಷ್ಠೆ ಈ ಗೆಲುವು ಸಾಧಿಸಲು ಪ್ರಮುಖ ಕಾರಣವಾಗಿದೆ ಎಂದು ಚನ್ನರಾಜ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಹೆಬ್ಬಾಳಕರ ಮತ್ತು ಬಿಜೆಪಿಯಲ್ಲಿರುವ ಜಾರಕಿಹೊಳಿ ಮಧ್ಯೆದ ಯುದ್ಧದ ಸ್ವರೂಪ ಪಡೆದುಕೊಂಡಿದ್ದ ಈ ಚುನಾವಣೆಯಲ್ಲಿ ಲಕ್ಷ್ಮಿ ಅವರು ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದ ‘ನಮ್ಮಲ್ಲಿಯ ಕೊಳೆ ಹೋಗಿದೆ' ಎಂಬ ಮಾತಿಗೆ ಡಿ. 14 ರಂದು ಎಲ್ಲ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ಕೊಡುತ್ತೇನೆ. ಬೇಕಾದರೆ ‘ವಾರ್’ ನಡೆಯಲಿ ಎಂದು ಘೋಷಿಸಿದ್ದ ರಮೇಶ ಜಾರಕಿಹೊಳಿ ಅವರ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಈ ಚುನಾವಣೆಯಲ್ಲಿ ಪಂಚಮಸಾಲಿ ಸ್ವಾಮೀಜಿಯೊಬ್ಬರನ್ನು ರಮೇಶ ಜಾರಕಿಹೊಳಿ ಸಮ್ಮುಖದಲ್ಲಿ ಎಳೆದು ತಂದಿದ್ದರ ಸೇಡನ್ನು ಪ್ರಥಮ ಪ್ರಾಶಸ್ತ್ಯದ ಮತ ಹಾಕಿಸುವ ಮೂಲಕ ಆ ಸಮಾಜದವರು ತೀರಿಸಿಕೊಂಡರೇ ಎಂಬ ಚರ್ಚೆಗಳು ಈಗ ನಡೆದಿವೆ.
Post a Comment