‘ಸಾಕ್ಷಿ’ ಯಂತೆ ಅಮಿತಾಬ್ ಬಚ್ಚನ್ಗೂ ಆಗಿತ್ತು!
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಬಾನಲ್ಲಿ ನಿನ್ನಿಂದ ಸೂರ್ಯೋದಯಾ...
ಆ ಹುಡುಗಿಯ ಸಿರಿಕಂಠದಿಂದ ಮೂಡಿಬಂದ ಹಾಡು ಕೇಳಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ, ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯಪ್ರಕಾಶ್ ಎದ್ದು ವೇದಿಕೆಗೆ ಬಂದಿದ್ದರು. ಮನದುಂಬಿ ಹರಸಿದರು. ಅವರ ಮಾತುಗಳಿಂದ, ಗಾಯಕಿ ಮತ್ತು ಆಕೆಯ ಪಾಲಕರ ಕಣ್ಣಲ್ಲಿ ಆನಂದಭಾಷ್ಟ ತುಂಬಿ ಬಂದವು.
ಇಂಥದೊಂದು ಹೃದಯಸ್ಪರ್ಶಿಗೆ ಘಟನೆಗೆ ಸಾಕ್ಷಿಯಾಗಿದ್ದು ಜಿ ಕನ್ನಡದ ಸರಿಗಮಪ ವೇದಿಕೆ.
ಈ ಪ್ರಶಂಸೆಗೆ, ಹಾಡಿದ ರೀತಿಗೆ ಪ್ರೀತಿಯಿಂದ ಎದ್ದು ಬರಲು ಕಾರಣರಾದವರು ಸಾಕ್ಷಿ ಕಲ್ಲೂರ. ಇತಿಹಾಸ ಪ್ರಸಿದ್ಧ ಕಿತ್ತೂರು ನಾಡಿನವರು. ಪಕ್ಕದ ಹುಲಿಕಟ್ಟಿ ಪ್ರತಿಭಾನ್ವಿತೆಯ ತವರೂರು.
ಗಾಯಕ ವಿಜಯಪ್ರಕಾಶ್ ಮಾತನಾಡಿ ‘ಈಕೆ ಈ ವೇದಿಕೆಗೆ ಹಾಡಲು ಬಂದಿದ್ದು ನಮ್ಮ ಪುಣ್ಯ. ನಾಡಿಗೆ ಸಿಗ್ತಾ ಇರುವುದು ನಾಡಿನ ಪುಣ್ಯ' ಎಂದು ಹೇಳಿದ್ದು, ದೊಡ್ಡ ಮಾತಿಗೆ ಮತ್ತು ಆಕೆಯ ಪ್ರತಿಭೆಗೆ ಸಾಕ್ಷಿಯಾಗಿತ್ತು. ಪ್ರತಿಭಾವಂತರನ್ನು ಪ್ರತಿಭಾವಂತರೇ ಗುರುತಿಸುತ್ತಾರೆ ಮತ್ತು ಮೆಚ್ಚುತ್ತಾರೆ, ಕರುಬುವುದಿಲ್ಲ ಎಂಬುದಕ್ಕೆ ಇದೇ ಶ್ರೇಷ್ಠ ಉದಾಹರಣೆ ಕೂಡಾ ಆಗಿತ್ತು.
‘ಈಕೆಯ ಶಿಕ್ಷಣ ಮತ್ತು ಸಂಗೀತ ಎರಡನ್ನೂ ಪಾಲಕರಾದ ನೀವು ಪೋಷಿಸಬೇಕು' ಎಂದವರು ಹಂಸಲೇಖ. ‘ತಂದೆಯ ಕನಸನ್ನು ಪುತ್ರಿ ಸಾಕ್ಷಿ ಈಡೇರಿಸುತ್ತಿದ್ದಾಳೆ' ಎಂದು ಅರ್ಜುನ್ ಜನ್ಯ ಮೆಚ್ಚುಗೆಯ ಮಾತುಗಳನ್ನಾಡಿದರು.
ನಾಡಿನ ಸಿನಿಮಾ ರಂಗದ ಅಪ್ರತಿಮ ಖ್ಯಾತ ನಾಮರಿಂದ ಪ್ರಶಂಸೆಗೆ ಪಾತ್ರರಾದ ಇದೇ ಸಾಕ್ಷಿ ಕಲ್ಲೂರ, ಹಿಂದೆ ನಡೆದ ‘ಕಿತ್ತೂರು ಸ್ಟಾರ್ ಸಿಂಗರ್' ಆಯ್ಕೆಗಾಗಿ ನಡೆದ ಪರೀಕ್ಷೆಯಲ್ಲಿ ನಿರ್ಣಾಯಕರು ಆಯ್ಕೆ ಮಾಡಿರಲಿಲ್ಲ ಎಂಬುದು ಈಗ ಸೋಜಿಗವಾಗಿ ಕಾಣುತ್ತಿದೆ. ಆದರೆ ತಂದೆ ಹಟ ಹಿಡಿದು ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ಹಳ್ಳಿಗಾಡಿನಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಪ್ರತಿಭಾವಂತರಿಗೆ ಅವಕಾಶ ದೊರೆಯುವುದಿಲ್ಲವೇ ಎಂಬ ಸಣ್ಣ ಸಂದೇಹವನ್ನು ಎಂದಿನಂತೆ ಆಗ ಈ ನಿರ್ಣಯ ಹುಟ್ಟು ಹಾಕಿತ್ತು.
ಅಚಿದೆ ಹಾಗೆ, ಬಾಲಿವುಡ್ ಬಾದಶಾ, ಖ್ಯಾತ ನಟ ಅಮಿತಾಬ್ ಬಚ್ಚನ್ಗೂ ಹೀಗೆ ಆರಂಭದಲ್ಲಿ ಆಗಿತ್ತು. ಆಕಾಶವಾಣಿಗೆ ಸೇರಬೇಕೆಂದು ಹೋದಾಗ ಧ್ವನಿ ಪರೀಕ್ಷೆ ನಡೆಸಲಾಯಿತು. ‘ನಿಮ್ಮ ಧ್ವನಿ ಸರಿಯಲ್ಲ, ಕೀರಲು' ಇದೆ ಎಂದು ಮುಂಬೈನಲ್ಲಿ ಹೇಳಿ ಕಳುಹಿಸಿದ್ದರಂತೆ. ಆಕಾಶವಾಣಿಯಲ್ಲ, ಅವರ ಧ್ವನಿ ಕೇಳಲು ಈಗ ದೇಶವೇ ಹಾತೊರೆಯುತ್ತದೆ, ತುದಿಗಾಲು ಮೇಲೆ ನಿಲ್ಲುತ್ತದೆ!
Post a Comment