ಸಮಾಜಮುಖಿ ಕಾರ್ಯಗಳಿಗೆ ಸಂಘಟನೆ ಮುಂದಾಗಲಿ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೆಸರಿಟ್ಟುಕೊಂಡು ಉದಯಿಸಿರುವ ಯುವಸಂಘಟನೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಜಾತಿ ಮತ್ತು ರಾಜಕೀಯ ಪಕ್ಷಗಳಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಶಾಸಕ ಮಹಾಂತೇಶ ದೊಡ್ಡಗೌಡರ ಕಿವಿಮಾತು ಹೇಳಿದರು.
ಇಲ್ಲಿಯ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸಂಘಟನೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮ ಕೆಲಸಗಳನ್ನು ಏರ್ಪಡಿಸುವುದರಿಂದ ಸಮಾಜದ ಪ್ರೀತಿ, ಗೌರವ ಕಾರ್ಯಕರ್ತರಿಗೆ ದೊರಕುತ್ತದೆ. ಈ ಮೂಲಕ ತಮ್ಮದೇ ಛಾಪು ಮೂಡುವುದು. ಅಂಗವಿಕಲರು ಹಾಗೂ ಅನಾಥರ ಸೇವೆ ಮಾಡುವುದರಿಂದ ಸಂಘಟನೆಗೆ ಗೌರವ ಸಿಗುತ್ತದೆ ಎಂದರು.
ಅದ್ಧೂರಿಯಾಗಿ ಸಂಘಟನೆ ಉದ್ಘಾಟಿಸುವುದು ಮುಖ್ಯವಾಗುವುದಿಲ್ಲ. ಅದನ್ನು ನಿರಂತರವಾಗಿ ಪೋಷಿಸಿಕೊಂಡು ಹೋಗಬೇಕು. ನಾವು ಅಳಿದು ಹೋದರೂ ಅದರ ಹೆಸರು ಉಳಿಯುವಂತಾಗಬೇಕು. ಆ ರೀತಿ ಕೆಲಸಗಳು ಸಂಘಟನೆಗಳಿಂದ ಆಗಬೇಕು ಎಂದು ಆಶಿಸಿದರು.
ಗ್ರಾಮೀಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಮಾತನಾಡಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರಂಥ ಮಹಾಪುರುಷರನ್ನು ಜಾತಿಗೆ ಸೀಮಿತಗೊಳಿಸಬಾರದು. ಅದರಿಂದ ನಾವೇ ಚಿಕ್ಕವರಾಗುತ್ತೇವೆ. ರಾಷ್ಟ್ರಪುರುಷರು ಜಾತಿ, ಧರ್ಮಗಳನ್ನು ಮೀರಿದವರು ಎಂದು ಹೇಳಿದರು.
ಕಿರಣ ವಾಳದ ಮಾತನಾಡಿ, ಅ. 23 ಮತ್ತು 24 ರಂದು ನಡೆಯಲಿರುವ ಕಿತ್ತೂರು ಉತ್ಸವದಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಉತ್ಸವ ಮುಗಿದ ನಂತರ ಕೋಟೆ ಆವರಣದೊಳಗೆ ಸ್ವಚ್ಛತಾ ಕಾರ್ಯಕ್ರಮ ಕೈಗೊಂಡರೆ ಅದು ಉತ್ತಮ ಕಾರ್ಯವಾಗಲಿದೆ ಎಂದರು.
ಸಾನಿಧ್ಯ ವಹಿಸಿದ್ದ ರಾಜಗುರು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರಂಥ ಮಹಾಪುರುಷರ ಇತಿಹಾಸವನ್ನು ಅರಿಯುವ ಕೆಲಸ ಆಗಬೇಕು. ಕೇವಲ ಹೆಸರಿಡುವುದಕ್ಕೆ ಮಾತ್ರ ಸೀಮಿತವಾಗಬಾರದು ಎಂದರು.
ಹಿರಿಯ ಪತ್ರಕರ್ತ ಪ್ರದೀಪ ಮೇಲಿನಮನಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಅರುಣಕುಮಾರ ಬಿಕ್ಕಣ್ಣವರ, ಸಿದ್ದು ಬಡಿಗೇರ, ಭೈರು ನಾಯಕ, ಸಂಘಟನೆ ರಾಜ್ಯಾಧ್ಯಕ್ಷ ಮಹಾಂತೇಶ ಕರಬಸಣ್ಣವರ ಪದಾಧಿಕಾರಿಗಳು, ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಯುವ ಸಂಘಟನೆ ಉಪಾಧ್ಯಕ್ಷ ಮಹೇಶ ಮಲಶೆಟ್ಟಿ ಪ್ರಾರ್ಥಿಸಿದರು. ಡಾ. ಬಸವರಾಜ ಪರವಣ್ಣವರ ಸ್ವಾಗತಿಸಿದರು. ಮಹೇಶ ಚನ್ನಂಗಿ ನಿರೂಪಿಸಿದರು. ಕಾರ್ಯದರ್ಶಿ ವಿನಾಯಕ ಗಾಣಗಿ ವಂದಿಸಿದರು.
Post a Comment