ನೇಕಾರನ ಕುಟುಂಬದ ನೆರವಿಗೆ ಸರ್ಕಾರ ಬರಲಿ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ವಿದ್ಯುತ್ ಮಗ್ಗ ನಡೆಸುತ್ತಿದ್ದಾಗ ಅವಘಡ ಸಂಭವಿಸಿ ಬಲಗೈ ಕಳೆದುಕೊಂಡಿದ್ದ ಇಲ್ಲಿಯ ಸೋಮವಾರ ಪೇಟೆಯ ನೇಕಾರರೊಬ್ಬರು ಚಿಕಿತ್ಸೆಗಾಗಿ ಮಾಡಿದ ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ರೈತಪರ ಹೋರಾಟಗಾರ ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿ ಪಿ. ಎಚ್. ನೀರಲಕೇರಿ ಸರ್ಕಾರವನ್ನು ಒತ್ತಾಯಿಸಿದರು.
ಆತ್ಮಹತ್ಯೆ ಮಾಡಿಕೊಂಡ ವೀರಣ್ಣ ಇಟಗಿ (35) ಮನೆಗೆ ಶನಿವಾರ ಭೇಟಿ ನೀಡಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ವಿದ್ಯುತ್ ಮಗ್ಗದಲ್ಲಿ ಸಿಕ್ಕು ಬಲಗೈ ಕಳೆದುಕೊಂಡಿದ್ದರು. ಚಿಕಿತ್ಸೆಗಾಗಿ ಕುಟುಂಬದವರು ಸಾಲ ಮಾಡಿಕೊಂಡಿದ್ದರು. ತನ್ನ ಜೀವಕ್ಕೆ ಹೀಗಾಯಿತಲ್ಲ ಎಂದು ನೊಂದುಕೊಂಡಿದ್ದ ಹಾಗೂ ಚಿಕಿತ್ಸೆಗೆ ಸಾಲ ಮಾಡಲಾಯಿತಲ್ಲ ಎಂದು ಬೇಸರ ಮಾಡಿಕೊಂಡು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ವೃತ್ತಿಯಿಂದ ನೇಕಾರನಾಗಿದ್ದ ಈತನ ಕುಟುಂಬದ ನೆರವಿಗೆ ಸರ್ಕಾರ ಧಾವಿಸಬೇಕು. ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಅವರು ಪುನರುಚ್ಛರಿಸಿದರು.
ಮೃತ ಈರಣ್ಣ ಪತ್ನಿ, ಇಬ್ಬರು ಮಕ್ಕಳು, ತಾಯಿಯನ್ನು ಅಗಲಿದ್ದಾರೆ. ಪುಟ್ಟ ಮನೆಯೇ ಆಸರೆಯಾಗಿದೆ. ದುಡಿಯುವವನೇ ಸಾವಿಗೀಡಾದ ಮೇಲೆ ಸಾಲ ಹೊತ್ತುಕೊಂಡು ಕುಟುಂಬ ನಿರ್ವಹಣೆ ಮಾಡುವುದು ಅವರಿಗೆ ಕಷ್ಟವಾಗಿದೆ. ಸÀಂಬಂಧಪಟ್ಟ ಸಚಿವರು ಹಾಗೂ ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕು. ಮೃತನ ಪತ್ನಿಗೆ ಜವಳಿ ಇಲಾಖೆಯಲ್ಲಿ ಕೆಲಸ ನೀಡಬೇಕು ಹಾಗೂ ಮೃತನ ಎರಡೂ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಅವರು ಆಗ್ರಹಿಸಿದರು.
ರೈತ ಮುಖಂಡ ಅಪ್ಪೇಶ ದಳವಾಯಿ ಜೊತೆಗಿದ್ದರು.
Post a Comment