ಭ್ರಷ್ಟಾಚಾರ, ರಾಷ್ಟ್ರೀಯ ದುರಾಚಾರ
ಪ್ರೆಸ್ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ತಾವು ಮಾಡುತ್ತಿರುವ ತಪ್ಪುಗಳಿಗೆ ಅಮಾಯಕರನ್ನು ಸಾಕ್ಷಿಯಾಗಿಟ್ಟುಕೊಳ್ಳುವ ಸಂಪ್ರದಾಯ ರಾಜಕಾರಣದಲ್ಲಿ ಬೆಳೆಯುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಚಿಂತಕ, ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ರಾಜಕಾರಣಿ ಮಾಡುವ ಎಲ್ಲ ಕೆಲಸಗಳಿಗೂ ಜನಸಾಮಾನ್ಯರ ಒಪ್ಪಿಗೆಯಿದೆ ಎಂಬ ಭಾಷೆಯನ್ನು ಪ್ರಯೋಗಿಸಲಾಗುತ್ತದೆ. ಇದು ಬಹುತೇಕ ರಾಜಕಾರಣಿಗಳಿಗೆ ಅನ್ವಯಿಸುವ ಮಾತಾಗಿದೆ ಎಂದು ಹೇಳುತ್ತಾರೆ.
ಕೇಳಿ..
ತಾತ್ವಿಕ ವಿಚಾರಗಳು ಜನರ ಮನಸ್ಸಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ಕೊರಗು ನನ್ನಲ್ಲಿ ಕಾಣ್ತಾ ಇದೆ. ಇಂಥ ಕಾರ್ಯಕ್ರಮದ ವಿಚಾರಗಳಿಗೂ ಆಸ್ಪದ ಕೊಡುತ್ತಿಲ್ಲ. ಕೆಲವು ಸ್ವಯಂ ಸೇವಾ ಸಂಸ್ಥೆಗಳು, ವಿಚಾರವಂತರು ಜನರಲ್ಲಿ ಆರೋಗ್ಯಕರ ಪ್ರಜ್ಞೆ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಅವರೇನೂ ಸುಮ್ಮನೆ ಕುಳಿತಿಲ್ಲ.
ಆದರೆ, ತೋಳ್ಬಲ ಮತ್ತು ದುಡ್ಡಿನ ಬಲ ಇದ್ದಂಥ ಜನರು, ಒಳ್ಳೆಯ ವಿಚಾರವಂತರನ್ನು ಯಾವ ರೀತಿ ಕೊನೆಗಾಣಿಸಬೇಕು ಅಥವಾ ಅವರನ್ನು ನಿರ್ನಾಮ ಮಾಡಬೇಕು ಎಂಬ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ಈ ರೀತಿ ದುಡ್ಡು ಅಥವಾ ತೋಳ್ಬಲ ಮಾಡುವವರು ಚರಿತ್ರೆ ಹೀನರು ಎಂಬ ವಿಷಯ ಜನರ ಮನಸ್ಸಿನಲ್ಲಿ ಬೇರೂರಿದೆ. ಇವೆಲ್ಲ ರಾಷ್ಟ್ರೀಯ ದುರಾಚರಗಳು. ಸಾರ್ವಜನಿಕರ ಒಪ್ಪಿಗೆ ಇವೆಲ್ಲವುಗಳಿಗೆ ಇದೆ ಎಂಬ ಭಾಷೆ ಬಳಸುತ್ತಿದ್ದಾರೆ ರಾಜಕಾರಣಿಗಳು.
ಉದಾಹರಣೆ ಹೇಳಬೇಕೆಂದರೆ: ದುಡ್ಡಿಲ್ಲದೇ ರಾಜಕಾರಣ ಮಾಡಲು ಸಾಧ್ಯವಿದೆಯೋ ಎಂದು ರಾಜಕಾರಣಿ ಸಾಮಾನ್ಯನಿಗೆ ಪ್ರಶ್ನೆ ಕೇಳುತ್ತಾರೆ. ಇಲ್ಲ ಬಿಡ್ರಿ ಎನ್ನುತ್ತಾನೆ ಅವನು. ಹಾಗಾದರೆ ದುಡ್ಡು ಎಲ್ಲಿಂದ ತರುವುದು ಎಂದು ಕೇಳುತ್ತಾರೆ. ಅದಕ್ಕೆ ದುಡ್ಡು ಮಾಡಬೇಕು, ಎಲೆಕ್ಷನ್ನಲ್ಲಿ ಖರ್ಚು ಮಾಡಬೇಕು ಎಂದು ಸಾಮಾನ್ಯನ ಒಲ್ಲದ ಮನಸ್ಸಿನ ಒಪ್ಪಿಗೆ ಮುದ್ರೆ ಹಾಕಿಸಿಕೊಳ್ಳುತ್ತಿದ್ದಾರೆ ರಾಜಕಾರಣಿಗಳು!
Post a Comment